೧೪ ರೀಲ್ಸ್ ಎಂಟರ್ಟೈನ್ಮೆಂಟ್ ಪ್ರೈ ಲಿ ಹಾಗೂ ಕೊಲ್ಲ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಗೋಪಿ ಅಚಂಟ, ರಾಮ್ ಅಚಂಟ ಹಾಗೂ ಅನಿಲ್ ಸುಂಕರ ಅವರು ನಿರ್ಮಿಸುತ್ತಿರುವ ಹಾಗೂ ಕೊಲ್ಲ ಪ್ರವೀಣ್ ಅವರ ಸಹ ನಿರ್ಮಾಣವಿರುವ ‘ಪವರ್* * * ಚಿತ್ರದ ಸೀಡಿ ಬಿಡುಗಡೆ ಸಮಾರಂಭ ಗಣಿಗಳ ನಾಡು ಎಂದೇ ಪ್ರಖ್ಯಾತವಾಗಿರುವ ಬಳ್ಳಾರಿಯ ಮುನ್ಸಿಪಲ್ ಗ್ರೌಂಡ್ನಲ್ಲಿ ಶನಿವಾರ ಸಂಜೆ ಅದ್ದೂರಿಯಾಗಿ ನಡೆಯಿತು. ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಚಿತ್ರರಸಿಕರು ಈ ಸುಂದರ ಸಮಾರಂಭಕ್ಕೆ ಸಾಕ್ಷಿಯಾದರು. ಎಸ್.ಎಸ್.ತಮನ್ ಸಂಗೀತ ನೀಡಿರುವ ಈ ಚಿತ್ರದ ಹಾಡುಗಳ ಸೀಡಿಯನ್ನು ಲಹರಿ ಸಂಸ್ಥೆಯವರು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ.
ಈ ಹಿಂದೆ ಪ್ರಿನ್ಸ್ ಮಹೇಶ್ಬಾಬು ಅಭಿನಯಿಸಿದ ‘ದೂಕುಡು ಚಿತ್ರವನ್ನು ಕನ್ನಡದಲ್ಲಿ ‘ಪವರ್* * * ಆಗಿ ನಿರ್ದೇಶಕ ಕೆ.ಮಾದೇಶ್ ನಿರೂಪಿಸಿದ್ದಾರೆ. ಸ್ಯಾಂಡಲ್ವುಡ್ನ ಸ್ಟಾರ್ನಟ ಪುನೀತ್ರಾಜಕುಮಾರ್ ‘ಪವರ್* * * ಆಗಿ ನಟಿಸಿದ್ದಾರೆ. ಖ್ಯಾತ ನಟಿ ತ್ರಿಷಾ ಈ ಚಿತ್ರದ ನಾಯಕಿ.
ತೆಲುಗಿನ ಹೆಸರಾಂತ ನಟ ಪ್ರಿನ್ಸ್ ಮಹೇಶ್ಬಾಬು ಈ ಚಿತ್ರದ ಆಡಿಯೋ ಸೀಡಿಯನ್ನು ಬಿಡುಗಡೆ ಮಾಡಿದರು. ಚಿತ್ರದ ಪ್ರಥಮ ಸೀಡಿಯನ್ನು ‘ದೂಕುಡು ಚಿತ್ರದ ನಿರ್ದೇಶಕ ಶ್ರೀನುವೈಟ್ಲಾ ಸ್ವೀಕರಿಸಿದರು. ಕನ್ನಡ ಹಾಗೂ ತೆಲುಗು ಚಿತ್ರರಂಗದ ಇಬ್ಬರೂ ಸೂಪರ್ಸ್ಟಾರ್ಗಳಾದ ಪವರ್ಸ್ಟಾರ್ ಪುನೀತ್ರಾಜಕುಮಾರ್ ಹಾಗೂ ಪ್ರಿನ್ಸ್ ಮಹೇಶ್ಬಾಬು ಒಂದೇ ವೇದಿಕೆಯಲ್ಲಿ ನೋಡುವ ಭಾಗ್ಯ ಬಳ್ಳಾರಿ ಜನತೆಗೆ ಅಂದು ಲಭಿಸಿತು.
ಜಗಮಗಿಸುವ ಕಲರ್ಫ಼ುಲ್ ವೇದಿಕೆಯಲ್ಲಿ ಕತ್ತಲಾವರಿಸುತ್ತಿದಂತೆ ಪ್ರಾರಂಭವಾದ ಈ ಕಾರ್ಯಕ್ರಮದಲ್ಲಿ ನೃತ್ಯ ಕಲಾವಿದರಿಂದ ಕಣ್ಮನ ತಣಿಸುವ ನೃತ್ಯ ಕಾರ್ಯಕ್ರಮ ನಡೆಯಿತು.
ವರ್ಣರಂಜಿತ ಸಮಾರಂಭದ ನಡುವೆ ಚಿತ್ರದ ಸೀಡಿ ಬಿಡುಗಡೆ ಮಾಡಿ ಮಾತನಾಡಿದ ಮಹೇಶ್ಬಾಬು ಅವರು ‘ಪೋಕಿರಿ ಚಿತ್ರದ ಸಂದರ್ಭದಲ್ಲಿ ವರನಟ ಡಾ:ರಾಜಕುಮಾರ್ ಅವರ ಮನೆಗೆ ಭೇಟಿ ನೀಡಿದ್ದನ್ನು ನೆನಪಿಸಿಕೊಂಡರು ಹಾಗೂ ಪುನೀತ್ರಾಜಕುಮಾರ್ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿರುವ ಪ್ರತಿಭಾವಂತ ನಟ ಹಾಗೂ ನನ್ನ ಆತ್ಮೀಯ ಸ್ನೇಹಿತರೂ ಕೂಡ. ನಾನು ಅಭಿನಯಸಿದ ‘ದೂಕುಡು ಚಿತ್ರ ಭರ್ಜರಿ ಯಶಸ್ಸು ಕಂಡಿದೆ. ಈ ಸಿನಿಮಾ ಕೂಡ ದೊಡ್ಡ ಹೆಸರು ಮಾಡಲಿ ಎಂದು ಶುಭ ಕೋರಿದರು
ಗೆಳೆಯನ ಮಾತಿನಿಂದ ಸಂತಸಗೊಂಡ ಪುನೀತ್ ಅವರು ತೆಲುಗು ಚಿತ್ರರಂಗದ ಖ್ಯಾತ ನಟ ಮಹೇಶ್ಬಾಬು ನನ್ನ ಸ್ನೇಹಿತರು. ಅವರು ಇಲ್ಲಿಗೆ ಬಂದು ನನ್ನ ಚಿತ್ರದ ಆಡಿಯೋ ಬಿಡುಗಡೆ ಮಾಡಿದ್ದು ತುಂಬಾ ಖುಷಿಯಾಗಿದೆ. ಅಲ್ಲದೆ ಬಳ್ಳಾರಿ ನಗರ ನನಗೆ ಇಷ್ಟವಾದ ಊರು. ನನ್ನ ಹಲವಾರು ಚಿತ್ರಗಳ ಚಿತ್ರೀಕರಣ ಇಲ್ಲಿನ ಸುತ್ತಮುತ್ತಲ್ಲ ಪ್ರದೇಶಗಳಲ್ಲಿ ನಡೆದಿದೆ. ಮಾದೇಶ್ ಅವರು ಈ ಸಿನಿಮಾವನ್ನು ಅದ್ಭುತವಾಗಿ ನಿರ್ದೇಶಿಸಿದ್ದಾರೆ. ನಿರ್ಮಾಪಕರು ಅದ್ದೂರಿಯಾಗಿ ಚಿತ್ರ ನಿರ್ಮಾಣ ಮಾಡಿದ್ದಾರೆ ಎಂದು ಚಿತ್ರತಂಡದವರ ಸಹಕಾರವನ್ನು ನೆನಪಿಸಿಕೊಂಡರು.
ಬಳ್ಳಾರಿಯಲ್ಲಿ ಆಗಾಗ ಕರೆಂಟ್ ಇರಲ್ಲ ಅಂತಾರೆ. ಈಗ ಪವರ್ ಬಂದಿದೆ. ಇನ್ಮೇಲೆ ನಿರಂತರವಾಗಿ ಪವರ್ ಇರುತ್ತೆ ಎಂದು ಹಿರಿಯ ನಟ ದೊಡ್ಡಣ್ಣ ಹೇಳಿದರು. ಶರತ್ಲೋಹಿತಾಶ್ವ ಸೇರಿದಂತೆ ಚಿತ್ರದಲ್ಲಿ ಅಭಿನಯಿಸಿರುವ ಕಲಾವಿದರು, ತಂತ್ರಜ಼್ಞರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.